Monday, 4 July 2011

ಯುದ್ಧ-ಭಯಂಕರ





ಪರ್ವವಾಯಿತೋ ಬಾಲಮನ್ಯುವಿನ ಮರಣವಾರ್ತೆಯಿಂ ಮುದಗೊಂಡು-ವೈರಿಗಡಣ....? ಉಹುಂ....ಇಲ್ಲ..ಖಂಡಿತವಾಗಿ......!!!
ಗರ್ವದಿಂ ರುಂಡಗಳ ಚೆಂಡಾಡಿದ ಅಭಿಮನ್ಯುವಿನ ನಿಸ್ತೇಜ-ಛಿದ್ರದೇಹದ ತುಣುಕುಗಳು,
ಸೆಟೆತವಳಿಯದೆ ಉಬ್ಬಿನಿಂತ ಸ್ನಾಯು-ಖಂಡಗಳು
ಮಾಗದ ಮಂದಹಾಸ-ಮರುತನ ಸೆಳೆವಿಗೆ ಬಳುಕುವ ಮುಂಗುರುಳು
ಬಿಗಿದ ಮುಷ್ಟಿಯೊಳ್ ಬಿಡಿಸಲಾಗದ ರಥದ-ಗಾಲಿಗಳು
ಸಿಗಿದ ಚರ್ಮದೊಳಗಿನಿಂ ಒಸರುತಿರ್ಪ ರಕ್ತ- ಕಂಡಕ್ಷಣದಲ್ಲಿ
ಸರ್ಪಕೇತನ ಸಂಶಯ ದಿಟವಾಯ್ತು-"ತಾನಿನ್ನು ಯುದ್ಧದಲಿ ಗೆಲ್ಲಲಾರೆ"







-

ಕರ್ಣ-ಭಾರ





ವಿಧಿಯ ಬಗೆದೊದೆದವಂಗೆ
ಎದೆಯ ಬಗೆವುದುದದೇನು?
ನಿಂದೆಯಲಿ ಹೂತವಂಗೆ ರಥದ ಗಾಲಿಗಳು
ಕಂದಕದೊಳು ಹೂತಡೇನು?
ಸಮತೆಯ ಎತ್ತಿದ ಗೆಣೆಯನೊಳು
ಮಮತೆಯ, ಮಾತೆಯಿಂಧಧಿಕ ತೋರಿದ - ಮಹಾಕಲಿ ಕರ್ಣ








Saturday, 25 June 2011

ಚಿತ್ತಿನ ಚಂದ್ರ

ಚಂದ್ರನ ಚಿತ್ತಾರ
ಕಂದಮ್ಮಗಳ ಮೊದಲ ಬರಹದಲಿ
ಅರಳುವ ಮುದ್ದಾದ ದುಂಡಗಿನ ಚಿತ್ತು,
ನರೆ-ತಿಳಿದರಿಗೆ ಕಾಣುವುದಿನಿತೆ....,
ಭೂರಮೆಗೆ ನಿರತ ಚಂದಿರನ ಸುತ್ತು.,



ಸೂರ್ಯ ವೃತ್ತಾಂತ

ಮುಡಿಯಲ್ಲಿ ನಗುನಗುತ,
ನಡುವೊಳಗೆ ತಾ ಸುಟ್ಟು,
ಅಡಿ ಸರಿದ ನಿಶೆಯೇರಿ,
ಎಡೆಬಿಡದೆ ನಡೆವ ಸೂರ್ಯ ವೃತ್ತಾಂತ.

Thursday, 23 June 2011

ಬೆದರು-ಬೊಂಬೆ

ಸೊಂಟದ ಮೇಲೆ ಕೈ,
ಗಂಭೀರ ನಿಲುವಿನ ಮೈ,
ಬಣ್ಣದ ಆಯುಧ ಕೈಯೊಳಗೆ ಇತ್ತು,
ಬೆದರುಬೊಂಬೆಗೇಕೆ ಈ ಪರಿಯ ಗತ್ತು..?

ಕುಂಚದಲ್ಲಿ-ವೇಗದೂತ

ವಾಯುವೇಗದ ಪ್ರಹಾರ
ಮಿಂಚಿನ ಓಟ,
ವಿಚಿತ್ರವಾದ ಆಕಾರ,
ಕುಂಚದ ಆಟ.

Monday, 13 June 2011

ನಿರ್ದೇಶಕರ ಮಾತು...!



ರಂಗದ ಮೇಲಿನ ಮನೆಗೆ
ರಂಗವಲ್ಲಿ ಯಾಕೆ?
ಬೆಳಕು ಆರುವವರೆಗೆ
ತೆಗೆಯದಿರಿ ಜೋಕೆ...!!!



ರವಿ ಕಾಣದ್ದು...!


ಬಿರು ಬಿಸಿಲೆಂದು,
ಮರದೆಡೆ ಅವಿತು
ನೆರಳ ಸವಿಯುವೆನೆಂದರೆ....
ಮರೆಯಿಂದ ಇಣುಕಿ ತನ್ನಿರುವ
ತೋರುತಿಹ ರವಿರಾಜ...!!!


Sunday, 5 June 2011

ಅಬ್ಬಾ ............ಹುತ್ತಗಳ ರಾಜ





ನನ್ನ ಆಫೀಸಿನ ಕೆಲಸದನಿಮಿತ್ತ ಒಮ್ಮೆ ಉತ್ತರಕನ್ನಡ ಜಿಲ್ಲೆಯ ಸಿರಸಿಗೆ ಭೇಟಿ ನೀಡಿದ್ದೆ.ಹಚ್ಚ ಹಸಿರು ಹಾಸಿನ ದಟ್ಟ ಕಾಡಿನ ಹಾದಿಯಾಗಿ ಸಾಗಿತ್ತು ನನ್ನ ಪಯಣ.ಪ್ರಾಕೃತಿಕ ಸೌಂದರ್ಯ ಸವಿಯುತ್ತಾ ಪಯಣ ಸಾಗಿರಲು ದಾರಿಯುದ್ದಕ್ಕೂ ಮರಗಳ ಸಂದಿನಿಂದ ಆಳೆತ್ತರದ ಮಣ್ಣಿನರಾಶಿ ಕಂಡು ನನ್ನ ನೋಟವನ್ನು ಅತ್ತ ತಿರುಗಿಸಿತು....ಏನಾಶ್ಚರ್ಯ ಆಳೆತ್ತರದ ಹುತ್ತಗಳು.....ಭೂತಾಯಿಯ ಹಸಿರಿನ ಮಡಿಲಿನ ಮದ್ಯೆ ಈ ಮಣ್ಣ ಮುದ್ದೆಗಳು ಅತ್ಯದ್ಭುತವಾಗಿ ಕಂಡವು....ದೇವರೇ ನನಗೆ ಈ ಯೋಗಭಾಗ್ಯ ಕರುಣಿಸಿದ ನಿನಗೆ ಶರಣು.